logo

ರಾಷ್ಟ್ರೀಯ ಹೆದ್ದಾರಿ 173 ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಮತ್ತು ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ |

ಹೊಸದುರ್ಗ, 3 : ಪಟ್ಟಣದಲ್ಲಿರುವ ಅಂಬೇಡ್ಕರ್ ಸರ್ಕಲ್ ಸಮೀಪ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 173 ರ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ, ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆಯೇ ಮಾಡಲಾಗಿದೆ. ಜನರು ರಸ್ತೆಗೆ ಹೊಂದಿಕೊಳ್ಳುತ್ತಿಲ್ಲ ಅಷ್ಟೇ. ಪಟ್ಟಣದ ನಿವಾಸಿಗಳಿಗೆ ಅಷ್ಟೇನೂ ತೊಂದರೆಯಾಗುವುದಿಲ್ಲ. ಗ್ರಾಮೀಣ ಭಾಗಗಳಿಂದ ಬರುವ ಜನರಿಗೆ ಸ್ವಲ್ಪ ಸಮಸ್ಯೆಯಾಗುತ್ತಿದೆ. ದಿನ ಕಳೆದಂತೆ ಎಲ್ಲರೂ ಹೊಂದಿಕೊಳ್ಳುತ್ತಾರೆ ಎಂದರು.
ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು 4 ರಸ್ತೆಗಳಲ್ಲಿಯೂ ಕೂಡ ಸೂಚನಾ ಫಲಕಗಳನ್ನು ಹಾಕಿ. ಆಗ ಸಂಚಾರ ನಡೆಸುವ ವಾಹನ ಸವಾರರು ನಿಧಾನವಾಗಿ ಬರುತ್ತಾರೆ. ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಬೇಕಾದಷ್ಟು ಜಾಗ ಮೀಸಲಿಟ್ಟು, ಇನ್ನು ಉಳಿದಿದ್ದರಲ್ಲಿಯೇ ರಸ್ತೆಯ ದುರಸ್ತಿ ಕಾರ್ಯ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಕುರಿತಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಮಾತನಾಡಿ, ಸಾರ್ವಜನಿಕರಿಗೆ ಯಾವುದೇ ತೊಂದ-ರೆಯಾಗದಂತೆ ಇನ್ನೆರಡು ತಿಂಗಳ ಒಳಗಾಗಿ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ. ಸರ್ಕಲ್, ಬಸ್ ತಂಗುದಾಣ ಸೇರಿದಂತೆ ಎಲ್ಲವನ್ನ ವ್ಯವಸ್ಥಿತವಾಗಿ ಮಾಡಲಾಗುವುದು. ಟಿ.ಬಿ.ವೃತ್ತದಲ್ಲಿನ ಜಾಗ ಇರುವಂತೆ ಪ್ರಾಧಿಕಾರದ ನಿಯಮದಂತೆ ಡಿವೈಡರ್ ಮತ್ತು ರಸ್ತೆ ಮಾಡಲಾಗಿದೆ. ಇನ್ನೂ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು. ಸ್ವಲ್ಪ ಸಣ್ಣ ವ್ಯತ್ಯಾಸಗಳಿದ್ದು ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನವೀನ್, ಮುಖ್ಯ ಇಂಜಿನಿಯರ್ ಜಗದೀಶ್ ಮತ್ತು ನಿವೃತ್ತ ಇಂಜಿನಿಯರ್ ಕೆ.ಸಿ. ನಿಂಗಪ್ಪ ಸೇರಿದಂತೆ ಇತರರಿದ್ದರು.

0
67 views