logo

ಪ್ರಕೃತಿದತ್ತ ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಕುಂದಾಣ ಬೆಟ್ಟದಲ್ಲಿ ಪತಾಂಜಲಿ ಯೋಗ ಪೀಠದ ಅಟ್ಟೂರು ಕೇಂದ್ರದ ಯೋಗ ಸಾಧಕರ ಚಾರಣ

ದೇವನಹಳ್ಳಿ: ಪ್ರಕೃತಿದತ್ತ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪತಾಂಜಲಿ ಯೋಗ ಪೀಠದ ಅಟ್ಟೂರು ಕೇಂದ್ರದ ಆಪ್ತ ಸಮಾಲೋಚಕ ಗುರುರಾಜ್ ರಾವ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಕುಂದಾಣ ಐತಿಹಾಸಿಕ ಬೆಟ್ಟದಲ್ಲಿ ಪತಾಂಜಲಿ ಯೋಗ ಪೀಠದ ಅಟ್ಟೂರು ಕೇಂದ್ರದ ಯೋಗ ಸಾಧಕರ ಚಾರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಷ್ಟು ಸುಂದರವಾದ ಪರಿಸರವನ್ನು ಉಳಿಸಿಕೊಳ್ಳಬೇಕಾಗಿದೆ. ಯೋಗ ಮತ್ತು ಪರಿಸರ ಬೇಕೇ ಬೇಕು. ಇತ್ತಿಚೆಗೆ ಹೃದಯ, ಶ್ವಾಸಕೋಶ ಮತ್ತು ಕೋವಿಡ್‌ಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಮನುಷ್ಯ ತುತ್ತಾಗುತ್ತಿದ್ದಾನೆ ಎಂದರೆ ಅದಕ್ಕೆ ಕಾರಣ ಆಮ್ಲಜನಕ ಎಲ್ಲೆಡೆ ಸಪರ್ಕವಾಗಿ ಸಿಗುತ್ತಿಲ್ಲ. ಕೆಲವೊಂದು ಕಡೆಗಳಲ್ಲಿ ಹಣಕೊಟ್ಟು ಆಕ್ಸಿಜನ್ ಖರೀದಿ ಮಾಡುವಂತಹ ಪರಿಸ್ಥಿತಿ ಬಂದಿದೆ. ಕುಂದಾಣ ಬೆಟ್ಟದಲ್ಲಿ ಸಮೃದ್ಧ ಆಮ್ಲಜನಕವನ್ನು ಉಸಿರಾಡಬಹುದು. ಕನಿಷ್ಠಪಕ್ಷ ಒತ್ತಡದ ಬದುಕಿನಿಂದ ನಿರಾಳರಾಗಲು ಪ್ರತಿಯೊಬ್ಬರು ನಿಸರ್ಗದತ್ತ ಬೆಟ್ಟಕ್ಕೆ ಭೇಟಿ ನೀಡಬೇಕೆಂದರು.

ಸರಕಾರದಿಂದ ಕುಂದಾಣ ಬೆಟ್ಟದ ಅಭಿವೃದ್ಧಿ ಪ್ರಗತಿಯಲ್ಲಿದೆ. ಈ ರೀತಿಯ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿ ಪಡಿಸಿ ಜನರಿಗೆ ಮಾಹಿತಿ ಕೊಟ್ಟರೆ ಜನರು ಬಂದು ಹೋಗುತ್ತಾರೆ. ಮಹಾತ್ಮ ಗಾಂಧಿಜಿಯವರು ಹೇಳಿರುವ ಹಾಗೆ ಹಳ್ಳಿ ಅಭಿವೃದ್ಧಿಯಾದರೆ, ದೇಶ ಅಭಿವೃದ್ಧಿಯಾಗುತ್ತದೆ ಎಂದು ಅದೇ ರೀತಿ ಇಂತಹ ಸ್ಥಳಗಳು ಅಭಿವೃದ್ಧಿಯಾದರೆ, ನಮ್ಮ ದೇಶ ಮತ್ತು ಬದುಕುವ ನಾವುಗಳು ಸಮೃದ್ಧವಾಗಿ ಆರೋಗ್ಯಕರವಾಗಿ, ದೈಹಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸದಸ್ಯೆ ಪಾವನ ಮಾತನಾಡಿ, ಒಂದು ದಿನದ ಚಾರಣದಲ್ಲಿ ಬಹಳಷ್ಟು ಕಲಿಯಲು ಅವಕಾಶಗಳು ತೆರೆದಂತಾಗಿದೆ. ಬೆಳಗಿನ ಜಾವದಲ್ಲಿ ಪ್ರಕೃತಿ ಸೊಬಗನ್ನು ಸವಿಯಲು ಕಾರಣವಾಗಿದೆ. ನಮ್ಮ ಸುತ್ತಮುತ್ತಲಿನ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿ ಮತ್ತು ಸ್ಥಳಗಳ ಬಗ್ಗೆ ಅರಿವು ಸಹ ಮೂಡಿಸಿದಂತಾಗಿದೆ. ಇಲ್ಲಿನ ಪ್ರಕೃತಿಯನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ. ಮನಸ್ಸಿಗೆ ತುಂಬಾ ಸಂತೋಷದಾಯಕವಾಗುತ್ತಿದೆ. ಸರಕಾರ ಮತ್ತಷ್ಟು ಅಭಿವೃದ್ಧಿಗೊಳಿಸಿದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುವುದರಲ್ಲಿ ಸಂದೇಹವಿಲ್ಲವೆಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕರುನಾಡ ಬಾವುಟವನ್ನು ಹಿಡಿದು, ಮ್ಯೂಸಿಕ್ ಅಳವಡಿಸಿ ಹೆಜ್ಜೆ ಹಾಕುವುದರ ಮೂಲಕ ಪ್ರಕೃತಿಯ ಸೌಂದರ್ಯವನ್ನು ಚಾರಣಿಗರು ಕಣ್ತುಂಬಿಕೊಂಡ ದೃಶ್ಯ ಕಂಡುಬಂತು.

ಈ ವೇಳೆ ಪತಾಂಜಲಿ ಯೋಗ ಪೀಠದ ಅಟ್ಟೂರು ಕೇಂದ್ರದ ಯೋಗ ಸಾಧಕರು, ಚಾರಣಿಗರು ಇದ್ದರು.

ಚಿತ್ರ: ಕುಂದಾಣ ಬೆಟ್ಟಕ್ಕೆ ಪತಾಂಜಲಿ ಯೋಗ ಪೀಠದ ಅಟ್ಟೂರು ಕೇಂದ್ರದ ಯೋಗ ಸಾಧಕರು, ಚಾರಣಿಗರು ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡರು.

48
8412 views